ಅಜ್ಜನ ಹೆಜ್ಜೆ.... ಮೊಮ್ಮಗಳ ಪ್ರಸಂಗ !
ಲೇಖಕರು : ಚಂದ್ರಶೇಖರ ಬೀಜಾಡಿ ಕೋಟ
ಶುಕ್ರವಾರ, ಸೆಪ್ಟೆ೦ಬರ್ 20 , 2013
|
ಗಂಡುಕಲೆ ಎಂಬ ಖ್ಯಾತಿಯನ್ನು ಸಂಪಾದಿಸಿಕೊಂಡ ಯಕ್ಷಗಾನ ಕ್ಷೇತ್ರಕ್ಕೆ ಇತ್ತೀಚಿನ ದಶಕಗಳಲ್ಲಿ ಸಾಕಷ್ಟು ಮಹಿಳೆಯರು ಪ್ರವೇಶಿಸುತ್ತಿದ್ದಾರೆ. ರಂಗಸ್ಥಳದಲ್ಲಿ ಪುರುಷರಷ್ಟೇ ಸರ್ವ ಸಮರ್ಥವಾಗಿ ರಂಜಿಸಿ, ಕಲಾ ಪ್ರತಿಭೆಯನ್ನು ತೋರುವುದರೊಂದಿಗೆ ಗಂಡುಕಲೆ ಎಂಬ ಅರ್ಥವನ್ನು ಧೀಮಂತಿಕೆ ಎಂಬಂತೆ ನಿರೂಪಿಸುತ್ತಿದ್ದಾರೆ. ಇಲ್ಲಿ ಮಹಿಳಾ ವೇಷಧಾರಿಗಳ ಸಂಖ್ಯಾಬಲ ಅಧಿಕವಾಗುತ್ತಿದೆ. ಅಂತೆಯೇ ಇತ್ತೀಚೆಗೆ ಯಕ್ಷಗಾನ ಕವಯಿತ್ರಿಯರೂ ಅಲ್ಲಲ್ಲಿ ಉದಯವಾಗುವುದರೊಂದಿಗೆ ಕಲಾಲೋಕದಲ್ಲಿ ಹೊಸ ಸಂಚಲನ ಮೂಡಿಸುತ್ತಿದ್ದಾರೆ. ಅಂತಹ ಉದಯೋನ್ಮುಖ ಯಕ್ಷಗಾನ ಪ್ರಸಂಗಕರ್ತೆಯಾಗಿ ರತ್ನಾ ಆರ್. ಹೆಗಡೆ ಎಂಬ ಯುವತಿ ಇದೀಗ ಪರಿಚಿತವಾಗುತ್ತಿದ್ದಾರೆ.
ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಮೊಮ್ಮಗಳಾದ ರತ್ನಾ ಆರ್. ಹೆಗಡೆ ಶಿವ ಶಾಂಭವಿ ಎಂಬ ಹೆಸರಿನ ಯಕ್ಷಗಾನ ಪ್ರಸಂಗವನ್ನು ಬರೆದಿದ್ದಾರೆ. ಈ ಪ್ರಸಂಗಕ್ಕೆ ಯುವ ಪ್ರಸಂಗಕರ್ತ ಪ್ರಸಾದ್ ಕುಮಾರ್ ಮೊಗೆಬೆಟ್ಟು ಛಂದೋಬದ್ಧ ಯಕ್ಷಗಾನ ಪದ್ಯಗಳನ್ನು ರಚಿಸಿ ಸುಂದರ ಕಥಾನಕವಾಗಿಸಿದ್ದಾರೆ.
|
ಚಿಟ್ಟಾಣಿ ರಾಮಚಂದ್ರ ಹೆಗಡೆ
|
ರಂಗ ಮಾಂತ್ರಿಕ ಹಿರಿಯ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಅವರು ಶಿವ ಶಾಂಭವಿಯನ್ನು ರಂಗದಲ್ಲಿ ನಿರ್ದೇಶಿಸಲಿದ್ದಾರೆ. ವಿಶೇಷವೆಂದರೆ ಮೊಮ್ಮಗಳ ಯಕ್ಷಗಾನ ಪ್ರಸಂಗದಲ್ಲಿ ಅಜ್ಜ ಚಿಟ್ಟಾಣಿ ಗೆಜ್ಜೆ ಕಟ್ಟಿ ವಿಶಿಷ್ಟ ಪಾತ್ರವಾಗಿ ಹೆಜ್ಜೆ ಹಾಕುತ್ತಿರುವುದು ಕಲಾ ರಸಿಕರ ಆಕರ್ಷಣೆಗೆ ಕಾರಣವಾಗುತ್ತಿದೆ.
ಬಂಗಾರಮಕ್ಕಿ ಶ್ರೀ ವೀರಾಂಜನೇಯ ಯಕ್ಷ ಮಿತ್ರ ಮಂಡಳಿ ಹಾಗೂ ಹೆಸರಾಂತ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಸೆ. 27ರ ಂದು ರಾತ್ರಿ 9ಕ್ಕೆ ಕೊಲ್ಲೂರಿನ ಸ್ವರ್ಣಮುಖಿ ರಂಗ ಮಂದಿರದಲ್ಲಿ ಶಿವ ಶಾಂಭವಿಯ ಕಲಾಮಿತಿ ಯಕ್ಷಗಾನ ಪ್ರದರ್ಶನ, ಕೃತಿ ಬಿಡುಗಡೆ ಹಾಗೂ ಗೌರವ ಸಮರ್ಪಣಾ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.
ಪೂರ್ಣ ಪ್ರಮಾಣದ ನವ್ಯ ಕಥಾನಕ ಇದಾಗಿದ್ದು, ಪೌರಾಣಿಕ ಕಥಾ ಸನ್ನಿವೇಶವನ್ನು ರಸಭರಿತವಾಗಿ ಗರ್ಭೀಕರಿಸಿಕೊಂಡಿದೆ. ಧಾರೇಶ್ವರ್, ಕೊಳಗಿ, ಹಿಲ್ಲೂರು ಭಾಗವತಿಕೆ, ಶಂಕರ ಭಾಗವತ ಮದ್ದಳೆ, ಗಣೇಶ ಗಾಂವ್ಕರ್ ಅವರ ಚಂಡೆಯ ಹಿಮ್ಮೇಳದಲ್ಲಿ ಚಿಟ್ಟಾಣಿ ರಾಮಚಂದ್ರ ಹೆಗಡೆ, ಸುಬ್ರಹ್ಮಣ್ಯ ಚಿಟ್ಟಾಣಿ, ನರಸಿಂಹ ಚಿಟ್ಟಾಣಿ, ಕಾರ್ತಿಕ ಚಿಟ್ಟಾಣಿ, ಪ್ರಣವ ಶಂಕರ್, ಜಯಕುಮಾರ್, ಉದಯ ಜಡ್ಕಲ್, ನಾಗೇಶ, ಪ್ರಸನ್ನ, ದಿವಾಕರ್ ಆವರ್ಸೆ, ಶ್ರೀಧರ ಭಟ್ಟ ಕಾಸರಗೋಡು, ಪಂಜು ಕುಮಾರ್, ಉದಯ ಕುಮಾರ್ ಮುಮ್ಮೇಳದಲ್ಲಿ ವೆವಿಧ್ಯಮಯ ಪಾತ್ರಗಳಾಗಿ ರಂಗವೇರಲಿದ್ದಾರೆ. ಪ್ರಸಂಗ ಬಿಡುಗಡೆ, ಗೌರವ ಸಮರ್ಪಣಾ ಸಮಾರಂಭದ ಅಧ್ಯಕ್ಷತೆಯನ್ನು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ ಅಡ್ಯಂತಾಯ ವಹಿಸುವರು. ಮುಖ್ಯ ಅತಿಥಿಗಳಾಗಿ ಎಸ್.ಎಲ್. ಮಾರುತಿ, ಕೆ. ನರಸಿಂಹ ಭಟ್, ಎಚ್. ಕೃಷ್ಣಮೂರ್ತಿ, ರಾಮಕೃಷ್ಣ ಅಡಿಗ ಮೊದಲಾದ ಗಣ್ಯರು ಉಪಸ್ಥಿತರಿದ್ದಾರೆ. ಪ್ರಸಂಗವನ್ನು ಚಿಟ್ಟಾಣಿ ರಾಮಚಂದ್ರ ಹೆಗಡೆ ಬಿಡುಗಡೆ ಗೊಳಿಸಲಿದ್ದು, ಭಾಗವತ ಸುಬ್ರಹ್ಮಣ್ಯ ಧಾರೇಶ್ವರ, ಪ್ರಸಾದ ಕುಮಾರ್ ಮೊಗೆಬೆಟ್ಟು,ರತ್ನಾ ಆರ್. ಹೆಗಡೆಯವರಿಗೆ ಗೌರವ ಸಮರ್ಪಣೆಯಾಗಲಿದೆ.
ಕೃಪೆ : http://vijaykarnataka.indiatimes.com
|
|
|